Founder 2 Seer 1
Founder 1

पूर्णप्रज्ञविद्यापीठसंस्कृतमहापाठशाला

कर्नाटक-संस्कृत-विश्वविद्यालयात् मान्यता प्राप्ता

Center Highlight

जगद्गुरु श्रीमन्मध्वाचार्य मूलमहासंस्थानम्

श्री पेजावर अदोक्षज मठ:, उडुपि

Seer 2
ಶಿಕ್ಷಣ ಪದ್ಧತಿ - Poornaprajna Sanskrit Pathashala

ಶಿಕ್ಷಣ ಪದ್ಧತಿ

ಕ್ರಿ.ಶ. 1956 ಮೇ ತಿಂಗಳಲ್ಲಿ, ಅಂದರೆ ವಿದ್ಯಾಪೀಠವನ್ನು ಆರಂಭಿಸುವ ಮೊದಲ ತಿಂಗಳಲ್ಲಿ ಮಾಡಿದ ಘೋಷಣೆ ಹೀಗಿದೆ –

“ಈ ವಿದ್ಯಾಪೀಠದಲ್ಲಿ ಶಾಸ್ತ್ರ ಹಾಗೂ ಯಾಜ್ಞಿಕ ಈ ಎರಡು ವಿಭಾಗಗಳನ್ನು ತೆರೆಯಲಾಗುತ್ತದೆ. ಆರಂಭದಲ್ಲಿ ಶಾಸ್ತ್ರವಿಭಾಗಕ್ಕೆ 12 ವಿದ್ಯಾರ್ಥಿಗಳನ್ನು, ಯಾಜ್ಞಿಕ ವಿಭಾಗಕ್ಕೆ 6, ಹೀಗೆ ಒಟ್ಟು 18 ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲಾಗುವುದು. ಈ ವಿದ್ಯಾರ್ಥಿಗಳಿಗೆ ಉಚಿತ ಭೋಜನ ವ್ಯವಸ್ಥೆ ಮುಂತಾದ ಎಲ್ಲಾ ಸೌಕರ್ಯಗಳನ್ನೂ ಒದಗಿಸಲಾಗುವುದಲ್ಲದೆ ಅವರನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಲಾಗುವುದು.''

ವಿದ್ಯಾಪೀಠದಲ್ಲಿ ಮಾಧ್ವಶಾಸ್ತ್ರದಲ್ಲಿಯೂ ಯಾಜ್ಞಿಕದಲ್ಲೂ ಪರಿನಿಷ್ಠಿತ ಪಾಂಡಿತ್ಯವು ಬರುವ ರೀತಿಯಲ್ಲಿ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗುವುದು, ಕೊನೆಯ ತರಗತಿ ಮುಗಿದ ನಂತರ ವಿದ್ಯಾರ್ಥಿಗಳಿಗೆ ಪದವಿಯನ್ನು ಕೊಡಲಾಗುವುದಲ್ಲದೆ ಕೂಡಲೇ ಯೋಗ್ಯ ಉದ್ಯೋಗವನ್ನು ಕೊಡಲಾಗುವುದು. ಯಾಜ್ಞಿಕ ಶಿಕ್ಷಣ ಪಡೆದವರಿಗೂ ವಿಶೇಷ ಸಂಭಾವನೆಯನ್ನು ಸರಿಯಾದ ಅನುಕೂಲತೆಯನ್ನು ಮಾಡಿ ಕೊಡಲಾಗುವುದು.

ಹೀಗೆ ಈ ವಿದ್ಯಾಪೀಠದಿಂದ ಶಿಕ್ಷಣ ಪಡೆದ ಶಾಸ್ತ್ರ ಪಂಡಿತರೂ ಯಾಜ್ಞಿಕ ವಿದ್ವಾಂಸರೂ ನಿಶ್ಚಿಂತೆಯಿಂದ, ಗೌರವದಿಂದ ಜೀವನ ಸಾಗಿಸುವ ಏರ್ಪಾಡು ಇರುವುದರಿಂದ ಈ ವಿದ್ಯಾಪೀಠದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಂಡಿತರು ಹೊರಬರಬಹುದೆಂದೂ ವಿದ್ಯಾರ್ಥಿಗಳೂ ತುಂಬಾ ಉತ್ಸಾಹದಿಂದ ಪ್ರವೇಶಕ್ಕೆ ಬರುವರೆಂದೂ ಆಶಿಸಲಾಗಿದೆ.”

ವಿದ್ಯಾಪೀಠ ತಾನು ಹುಟ್ಟುವ ಮೊದಲೇ ಕೊಟ್ಟ ಈ ಆಶ್ವಾಸನೆಗೆ ಇಂದೂ ಬದ್ಧವಾಗಿದೆ. ಆರಂಭದಲ್ಲಿ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳನ್ನಷ್ಟೇ ಸೇರಿಸಿಕೊಳ್ಳಲಾಗುತ್ತಿತ್ತು. ನಿರ್ದಿಷ್ಟ ಅಂಕಗಳನ್ನು ಪಡೆಯದ ವಿದ್ಯಾರ್ಥಿಗಳಿಗೆ 'ಪಾಠಕ್ಕೆ ಪೀಠ, ಊಟಕ್ಕೆ ವಾರಾನ್ನ' ಎಂಬ ಕಟ್ಟು ನಿಟ್ಟೂ ಇತ್ತು. ಆದರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಅರ್ಹ ವಿದ್ಯಾರ್ಥಿಗಳೆಲ್ಲರನ್ನೂ ತೆಗೆದುಕೊಳ್ಳಲಾಗುತ್ತಿದೆ.

ಇಂದು ವಿದ್ಯಾಪೀಠದಲ್ಲಿ 13 ವರ್ಷದ ಅಧ್ಯಯನದ ಅವಕಾಶವಿದೆ. ಕರ್ನಾಟಕ ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ 'ವಿದ್ವಾನ್' (MA) ಎಂಬ ಪದವಿಯನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ. ದೈತವೇದಾಂತ, ತರ್ಕ, ಮೀಮಾಂಸಾ, ಅಲಂಕಾರ ಈ ನಾಲ್ಕು ವಿಭಾಗಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ. ಮೊದಲ ಎಂಟು ವರ್ಷಗಳ ಶಿಕ್ಷಣ ಎಲ್ಲರಿಗೂ ಸಮಾನವಾಗಿರುತ್ತದೆ. ಆ ನಂತರದ ಐದು ವರ್ಷಗಳಲ್ಲಿ ಮೇಲಿನ ವಿಭಾಗಗಳಲ್ಲಿ ಒಂದನ್ನು ಆಯ್ಕೆಮಾಡಬಹುದು.

ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಪರಿಗಣಿಸಿ ಶ್ರೀಗಳವರು ವಿದ್ಯಾರ್ಥಿ ವೇತನವನ್ನು ನೀಡುತ್ತಾರೆ. ಇದಲ್ಲದೆ ಅಧ್ಯಯನ ಮುಗಿದ ನಂತರ ವಿಶೇಷವಾರ್ಷಿಕ ಪರೀಕ್ಷೆಯ ಏರ್ಪಾಡಿದೆ. ದೈತಸಿದ್ಧಾಂತದ ಮೇರು ಕೃತಿ “ನ್ಯಾಯಸುಧಾ' ಗ್ರಂಥವನ್ನು ಶ್ರೀಪಾದರ ಸಮಕ್ಷದಲ್ಲಿ, ವಿದ್ವಾಂಸರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಸಮರ್ಥವಾಗಿ ಪರೀಕ್ಷೆ ನೀಡಿದರೆ ಯೋಗ್ಯಸಂಭಾವನೆಯನ್ನು ನೀಡಲಾಗುತ್ತದೆ. ಅನೇಕ ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆದಿರುವರು.
ತತ್ವಶಾಸ್ತ್ರದ ಅಧ್ಯಯನದ ಜೊತೆಗೆ ಆಂಗ್ಲ ಭಾಷೆಯನ್ನು ಕಲಿಸಲಾಗುತ್ತದೆ. ಸಂಸ್ಥೆಗೆ ಸೇರಿದ 6 ಮತ್ತು 7ನೆಯ ವರ್ಷಗಳಲ್ಲಿ ನುರಿತ ಅಧ್ಯಾಪಕರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಬೇಕಾದ ವಿಷಯಗಳನ್ನು ಬೋಧಿಸಲಾಗುವುದು. 7ನೆಯ ವರ್ಷದಲ್ಲಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನೂ ತೆಗೆದುಕೊಳ್ಳಬಹುದು. ಮುಂದಿನ ವಿದ್ಯಾಭ್ಯಾಸಕ್ಕೆ ರಾತ್ರಿ ಕಾಲೇಜಿಗೆ ಹೋಗಲೂ ಅನುಮತಿಯಿದೆ. ಹೀಗಾಗಿ ಇಲ್ಲಿಂದ ಹೊರಬಂದ ವಿದ್ಯಾರ್ಥಿಯು ಸಾಮಾನ್ಯವಾಗಿ ಪದವೀಧರನಾಗಿಯೇ ಹೊರಬರುತ್ತಾನೆ.